You are currently viewing ಬೆಟ್ಟದ ಮಲ್ಲೇಶ್ವರನ ಹಾದಿಯಲ್ಲಿ ಬರೀ ಕಲ್ಲು ಮುಳ್ಳು. ಇಲ್ಲಿರುವ ಬೆಟ್ಟದಷ್ಟು ಸಮಸ್ಯೆಗಳನ್ನ ನೀಗಿಸುವವರು ಯಾರು.?

ಬೆಟ್ಟದ ಮಲ್ಲೇಶ್ವರನ ಹಾದಿಯಲ್ಲಿ ಬರೀ ಕಲ್ಲು ಮುಳ್ಳು. ಇಲ್ಲಿರುವ ಬೆಟ್ಟದಷ್ಟು ಸಮಸ್ಯೆಗಳನ್ನ ನೀಗಿಸುವವರು ಯಾರು.?

ವಿಜಯನಗರ ಜಿಲ್ಲೆಯ ಪ್ರಖ್ಯಾತ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀ ಬೆಟ್ಟದ ಮಲ್ಲೇಶ್ಚರ ದೇವಸ್ಥಾನ ಕೂಡ ಒಂದು, ಶ್ರಾವಣ ಮಾಸ ಬಂತೆಂದರೆ ಪ್ರತಿ ದಿನ ಭಕ್ತರು ಇಲ್ಲಿನ ಮಲ್ಲೇಶ್ವರನ ಧರ್ಶನಕ್ಕೆ ಬರುವುದು ಸರ್ವೇ ಸಾಮಾನ್ಯ ವಾಗಿರುತ್ತೆ. ಅದರಲ್ಲೂ ಶ್ರಾವಣ ಸೋಮವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ.

ವಿಜಯನಗರ, ಬಳ್ಳಾರಿ, ಗದಗ, ಕೊಪ್ಪಳ, ದಾವಣಗೆರೆ, ಶಿವಮೊಗ್ಗ ಜಿಲ್ಲೆ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಮಲ್ಲೇಶ್ವರನ ಭಕ್ತ ಸಮೂಹ ಇದೆ. ಹಾಗಾಗಿ ಶ್ರಾವಣ ಮಾಸದಂತೆಯೇ ಪ್ರತಿ ಅಮವಾಸೆಯ ದಿನದಂದು ಭಕ್ತ ಸಾಗರ ಸೇರಿರುತ್ತದೆ. ಧಾರ್ಮಿಕ ಕ್ಷೇತ್ರವಾಗಿ ಎಷ್ಟು ಪ್ರಖ್ಯಾತಿ ಪಡೆದಿದೆಯೋ ಪ್ರವಾಸಿ ತಾಣವಾಗಿ ಕೂಡ ಅಷ್ಟೇ ಪ್ರಾಮುಖ್ಯತೆಯನ್ನ ಪಡೆಯುತ್ತಿದೆ. ಕಾರಣ ಇಲ್ಲಿರುವ ಪರಿಸರ. ಬಿಸಿಲ ನಾಡೆನಿಸಿಕೊಂಡಿರುವ ವಿಜಯನಗರ ಜಿಲ್ಲೆಯಲ್ಲಿರುವ ಈ ಸ್ಥಳಕ್ಕೆ ಬೇಟಿಕೊಟ್ಟರೆ ಮಲೆನಾಡಿಗೆ ಬೇಟಿಕೊಟ್ಟ ಅನುಭವ ಆಗುತ್ತೆ.

 ಬೆಟ್ಟದ ಬುಡದಲ್ಲಿರುವ ಈ ಮಲ್ಲೇಶ್ವರನ ದೇವಸ್ಥಾನದ ಮೇಲೆ ಮೋಡಗಳು ಸರಿದ ಸಾಲಿನಲ್ಲಿ ನಿಂತು ಬೆಟ್ಟವನ್ನ ಬಳಿಸಿ ಮುನ್ನುಗ್ಗುವುದನ್ನ ನೋಡುವುದಕ್ಕೆ ಕಣ್ಣೆರಡು ಸಾಲದು. ಹಾಗಾಗಿ ಇಲ್ಲಿನ ಸುಂದರ ಪರಿಸರ ಈ ಬಾಗದ ಶಾಲಾ ಮಕ್ಕಳನ್ನ ಆಕರ್ಷಸಿಸುತ್ತದೆ. ಈ ಕಾರಣಕ್ಕೆ ಈ ಬಾಗದಲ್ಲಿ ಶೈಕ್ಷಣಿಕ ಪ್ರವಾಸ ಕೈಕೊಂಡರೆ ಈ ಸ್ಥಳಕ್ಕೆ ಆಧ್ಯೆತೆ ಇದ್ದೇ ಇರುತ್ತೆ. ಆದರೆ ಇಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿರುವ ಈ ಬೆಟ್ಟದ ಮಲ್ಲೇಶ್ವರನ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಮಾತ್ರ ಹದಗೆಟ್ಟು ಹೋಗಿದೆ‌. 

ಕುಮಾರನಹಳ್ಳಿ ತಾಂಡದಿಂದ ಪ್ರಾರಂಭವಾಗಿರುವ ಈ ರಸ್ತೆಗೆ ಸರಿಯಾದ ಡಾಂಬರೀಕರಣ ಆಗದೆ. ಅಸ್ಥಿ ಪಂಜರದಂತಾಗಿದೆ. ಹಾಗಾಗಿ ಈ ದೇವಸ್ಥಾನ ಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತರು ಮಲ್ಲೇಶನ ನೆನೆಯುತ್ತ ಸ್ಥಳೀಯ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಲೇ ಮುನ್ನಡೆಯುತ್ತಾರೆ.  ಕಳೆದ ಹತ್ತಾರು ವರ್ಷಗಳ ಹಿಂದೆ ಡಾಂಬರ್ ಕಂಡಿರುವ ಈ ರಸ್ತೆ ನಿರ್ವಹಣೆ ಇಲ್ಲದೆ ಹದಗೆಟ್ಟು ಹೋಗಿದೆ. ಅದೇರೀತಿ ಮೂಲ ಸೌಕರ್ಯಗಳ ಕೊರೆತೆಗಳು ಕೂಡ ಇಲ್ಲಿ ಹೆಚ್ಚಾಗಿವೆ. 

ದೇವಸ್ಥಾನಕ್ಕೆ ಬೇಟಿಕೊಡುವ ಭಕ್ತರಿಗೆ ಶೌಚಾಲಯ ಇಲ್ಲ, ಸ್ನಾನದ ಮನೆಯಂತೂ ಕನಸಿನ ಮಾತಾಗಿದೆ. ಇನ್ನು ಕುಡಿಯುವ ನೀರು ಇದ್ದರೂ ಸರಿಯಾದ ಬಳಕೆ ಆಗುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ದೇವಸ್ಥಾನ ಇದಾಗಿದ್ದು, ಇಲ್ಲಿಗೆ ಬರುವ ಭಕ್ತರ ಕಾಣಿಕೆಯನ್ನೇ ಮೀಸಲಿಟ್ಟು ಅಭಿವೃದ್ಧಿ ಪಡಿಸಿದರೆ ಒಂದೆರಡು ವರ್ಷಗಳಲ್ಲೇ ಸಾಕಷ್ಟು ಅಭಿವೃದ್ಧಿ ಕಾಣಬಹುದು ಎನ್ನುವುದು ಇಲ್ಲಿಗೆ ಬರುವ ಭಕ್ತರ ಅಭಿಪ್ರಾಯವಾಗಿದೆ.

 ದಿವಂಗತ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರು ಈ ದೇವಸ್ಥಾನದ ಬಗ್ಗೆ ಹೆಚ್ಚು ಕಾಳಜಿಯನ್ನ ಹೊಂದಿದ್ದು, ಅಂದಿಗೆ ತಕ್ಕ ಮಟ್ಟಿಗೆ ಅಭಿವೃದ್ಧಿ ಪಡಿಸುವ ಪ್ರಯತ್ನವನ್ನ ಮಾಡಿದ್ದರು, ಆದರೆ ಅಲ್ಲಿಂದ ಇಲ್ಲಿಯ ವರೆಗೆ ಒಂದು ನಯಾ ಪೈಸೆ ಅನುದಾನವನ್ನ ಕಂಡಂತೆ ಕಾಣುತ್ತಿಲ್ಲ ಈ ಬೆಟ್ಟದ ಮಲ್ಲೇಶ್ವರ ದೇವಾಲಯ. ಸಂಭಂದ ಪಟ್ಟ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ವರ್ಗ ಈ ದೇವಸ್ಥಾನಕ್ಕೆ ಹೆಚ್ಚು ಅನುದಾನವನ್ನ ಕೊಟ್ಟು ಅಭಿವೃದ್ಧಿ ಪಡಿಸಬೇಕಿದೆ. 

ಕಾರಣ ವಿಜಯನಗರ ಜಿಲ್ಲೆ ಐತಿಹಾಸಿಕವಾಗಿ ಪ್ರಖ್ಯಾತಿ ಪಡೆದ ಹಲವು ಪ್ರವಾಸಿ ಸ್ಥಳಗಳನ್ನ ಹೊಂದಿದೆ. ಈ ಕಾರಣಕ್ಕೆ ದೇಶ ಸೇರಿದಂತೆ ವಿದೇಶಗಳಿಂದಲೂ ಸಾಕಷ್ಟು ಪ್ರವಾಸಿಗರು ವಿಜಯನಗರ ಜಿಲ್ಲೆಗೆ ಬರುವುದು ವಾಡಿಕೆ, ಹೀಗೆ ಜಿಲ್ಲೆಗೆ ಬರುವ ಪ್ರವಾಸಿಗರನ್ನ ಬೆಟ್ಟದ ಮಲ್ಲೇಶ್ವರನ ದೇವಸ್ಥಾನದ ಕಡೆ ಮುಖ ಮಾಡುವಂತೆ ಮಾಡಬೇಕಾದ ಕರ್ತವ್ಯ ಇಲ್ಲಿನ ಪ್ರವಾಸೋಧ್ಯಮ ಇಲಾಖೆಯದ್ದು. 

ರಸ್ತೆಯಲ್ಲಿ ಸರಿಯಾದ ನಾಮ ಫಲಕ, ಮಾರ್ಗ ಸೂಚಿ, ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಬೆಟ್ಟದ ಮಲ್ಲೇಶ್ವರ ದೇವಸ್ಥಾನದ ಹೆಸರು ಸೇರ್ಪಡೆ ಮಾಡಿದ್ದೇ ಆದರೆ ಈ ಬಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ಕೊಟ್ಟಂತೆ ಆಗುತ್ತದೆ. ಇನ್ನು ಹೂವಿನ ಹಡಗಲಿ ತಾಲೂಕಿನಲ್ಲಿರುವ ಈ ದೇವಸ್ಥಾನಕ್ಕೆ ಸಂಪರ್ಕಿಸಬೇಕಾದರೆ, 

ಹೂವಿನ ಹಡಗಲಿ ಮಾರ್ಗವಾಗಿ ಬರುವವರು, ಕುಮಾರನಹಳ್ಳಿ ತಾಂಡಕ್ಕೆ ತಲುಪಿ ಅಲ್ಲಿಂದ ಎಡ ಬಾಗಕ್ಕೆ ತಿರುಗಿ ಸುಮಾರು ಮೂರು ಕಿಲೋಮಿಟರ್ ದೂರ ಕ್ರಮಿಸಿದರೆ ಶ್ರೀ ಕ್ಷೇತ್ರ ತಲುಪಬಹುದು. ಅದೇರೀತಿ ಹರಪನಹಳ್ಳಿ ಮಾರ್ಗವಾಗಿ ಬಂದವರಿಗೂ ಇದೇ ಮಾರ್ಗವಾಗಿರುತ್ತದೆ. 

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ತೆರೆಯಿರಿ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.