You are currently viewing ನಾಲ್ಕು ವರ್ಷದ ನಂತರ “ಡಾಲಿ ಉತ್ಸವ” ಮಾಡಲು ಅಭಿಮಾನಿಗಳ ತಯಾರಿ..

ನಾಲ್ಕು ವರ್ಷದ ನಂತರ “ಡಾಲಿ ಉತ್ಸವ” ಮಾಡಲು ಅಭಿಮಾನಿಗಳ ತಯಾರಿ..

  • Post category:Uncategorized

ಬೆಂಗಳೂರು ::ನಾಲ್ಕು ವರ್ಷದ ನಂತರ “ಡಾಲಿ ಉತ್ಸವ” ಮಾಡಲು ಅಭಿಮಾನಿಗಳ ತಯಾರಿ

4 ವರ್ಷದ ನಂತರ ಅದ್ದೂರಿಯಾಗಿ ನಡೆಯಲಿದೆ “ಡಾಲಿ ಉತ್ಸವ”

ಸ್ಯಾಂಡಲ್‌ವುಡ್ ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟನಾಗಿ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಡಾಲಿ ಧನಂಜಯ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ‘ಕಾಮನ್ ಮ್ಯಾನ್ ಹೀರೋ’ ಅಂತನೇ ಬಿರುದು ಪಡೆದಿರುವ ಡಾಲಿ ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ಬರ್ತಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರೆ. ಅಂದಹಾಗೆ ಧನಂಜಯ್ ಹುಟ್ಟುಹಬ್ಬ ಆಗಸ್ಟ್ 23. ಆದರೆ ಈಗಾಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಡಾಲಿ ಉತ್ಸವಕ್ಕೆ ಅಭಿಮಾನಿಗಳು ಸಜ್ಜಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು ‘ಅಭಿಮಾನದ ತೇರು ಎಳೆಯೋಣ ಬನ್ನಿ’ ಎಂದು ಟ್ಯಾಗ್ ಲೈನ್ ಇಡಲಾಗಿದೆ. ಇವತ್ತಿಗೆ ಸರಿಯಾಗಿ 25 ದಿನಗಳು ಬಾಕಿ ಉಳಿದಿದ್ದು. ಇಂದಿನಿಂದನೆ ಅಭಿಮಾನಿಗಳು ಉತ್ಸವಕ್ಕೆ ರೆಡಿಯಾಗಿದ್ದಾರೆ. ಅಂದಹಾಗೆ ಈ ಬಾರಿಯ ಧನಂಜಯ್ ಹುಟ್ಟುಹಬ್ಬ ತುಂಬನೇ ವಿಶೇಷ. 4 ವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಜೊತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಧನಂಜಯ್ ಅವರಿಗೆ ತುಂಬಾ ವಿಶೇಷವಾಗಿದೆ.

ನೆರೆ, ಕೊರೊನಾ, ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಕಾರಣದಿಂದ ಧನಂಜಯ್ ಕಳೆದ 4 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅಭಿಮಾನಿಗಳ ಕೈಗೂ ಸಿಕ್ಕಿರಲಿಲ್ಲ. ಹಾಗಾಗಿ ಈ ಬಾರಿ ದೊಡ್ಡ ಮಟ್ಟದಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದು ಹುಟ್ಟುಹಬ್ಬದ ದಿನ ಅಭಿಮಾನಿಗಳ ಜೊತೆಯೇ ಸಮಯ ಕಳೆಯಲು ನಿರ್ಧರಿಸಿದ್ದಾರೆ.

ಜಿಪಿ ನಗರದ ಗ್ರೌಂಡ್‌ನಲ್ಲಿ ಸೆಲೆಬ್ರೇಷನ್

ಧನಂಜಯ್ ಬರ್ತಡೇ ಸೆಲೆಬ್ರೇಷನ್ ಜೆಪಿ ನಗರದ ಗ್ರೌಂಡ್‌ನಲ್ಲಿ ನಡೆಯಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಬರುವ ಕಾರಣ ದೊಡ್ಡ ಗ್ರೌಂಡ್‌ನಲ್ಲಿ ಆಚರಣೆ ಮಾಡಿಕೊಳ್ಳಲು ಧನಂಜಯ್ ನಿರ್ಧರಿಸಿದ್ದಾರೆ. ಆಗಸ್ಟ್ 22ರ ರಾತ್ರಿಯಿಂದನೇ ಸೆಲೆಬ್ರೇಷನ್ ಶುರುವಾಗಲಿದೆ. 23ರಂದು ಗ್ರೌಂಡ್‌ನಲ್ಲಿ ಧನಂಜಯ್ ಎಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಿ ಅಭಿಮಾನಿಗಳ ಪ್ರೀತಿಯ ವಿಶ್ ಸ್ವೀಕರಿಸಲಿದ್ದಾರೆ.

ಊಟದ ವ್ಯವಸ್ಥೆ

ದೂರ ಊರುಗಳಿಂದ ಅಭಿಮಾನಿಗಳು ಬರುವ ಕಾರಣದಿಂದ ಊಟದ ವ್ಯವಸ್ಥೆ ಕೂಡ ಇರಲಿದೆ ಎನ್ನಲಾಗಿದೆ. ಮಾಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿಸಲಾಗಿದ್ದು ಎಲ್ಲಾ ಅಭಿಮಾನಿಗಳು ಊಟ ಮಾಡಿ ಸುರಕ್ಷಿತವಾಗಿ ಮತ್ತೆ ತಮ್ಮ ಊರುಗಳಿಗೆ ಮರಳಬೇಕು ಎನ್ನುವುದು ಧನಂಜಯ್ ಅವರ ಆಸೆ. ಹಾಗಾಗಿ ಡಾಲಿ ಉತ್ಸವ ಎಲ್ಲಾ ರೀತಿಯ ಸಕಲ ಸಿದ್ಧತೆ ಈಗಾಗಲೇ ನಡೆಯುತ್ತಿದ್ದು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆ ಇದೆ.