You are currently viewing ಹಗರಿಬೊಮ್ಮನಹಳ್ಳಿ ಯಲ್ಲಿ ಹಾಡಹಗಲೇ ಕರಡಿ ಪ್ರತ್ಯಕ್ಷ, ಜನರಲ್ಲಿ ಮನೆ ಮಾಡಿದ ಆತಂಕ.

ಹಗರಿಬೊಮ್ಮನಹಳ್ಳಿ ಯಲ್ಲಿ ಹಾಡಹಗಲೇ ಕರಡಿ ಪ್ರತ್ಯಕ್ಷ, ಜನರಲ್ಲಿ ಮನೆ ಮಾಡಿದ ಆತಂಕ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಇಂದು ಹಾಡಹಗಲೇ ಕರಡಿಯೊಂದು ಪ್ರತ್ಯಕ್ಷವಾಗಿದೆ. ಕೊಟ್ಟೂರು ರಸ್ತೆಯಲ್ಲಿರುವ ಪ್ರಸಿದ್ಧಿ ಸ್ಕೂಲ್ ಹಿಂಭಾಗದ ಕಾಂಪೌಂಡ್ ಬಳಿಯಲ್ಲಿ ಕಾಣಿಸಿಕೊಂಡ ಕರಡಿ, ಕೆಲ ಹೊತ್ತು ಜನರಲ್ಲಿ ಆತಂಕ ಸೃಷ್ಟಿಸಿತು.

ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಕೂಗಾಡಿ ಚಿರಾಡಿ ಅಲ್ಲಿಂದ ಕರಡಿಯನ್ನ ಓಡಿಸಿದರು. ಒಂದು ವೇಳೆ ಕರಡಿ ಸ್ಥಳೀಯರ ಕಣ್ಣಿಗೆ ಬೀಳದೆ ಇದ್ದಿದ್ದರೆ, ಶಾಲೆಯ ಕಾಂಪೌಂಡ್ ಒಳಗಡೆ ನುಗ್ಗಿ ಅಲ್ಲಿನ ಮಕ್ಕಳಿಗೆ ತೊಂದರೆ ಮಾಡುವ ಸಾಧ್ಯತೆ ಇತ್ತು.

ಸ್ಥಳೀಯರ ಸಮಯ ಪ್ರಜ್ಞೆಯಿಂದ ಅಂತದ್ದೊಂದು ಅನಾಹುತ ಸಂಭವಿಸುವುದು ತಪ್ಪಿದೆ. ಈ ಭಾಗದಲ್ಲಿ ಕರಡಿಗಳು ಕಾಣಿಸಿಕೊಳ್ಳುವುದು ತುಂಬಾ ಅಪರೂಪ, ಹೀಗಿದ್ದರೂ ಹಗರಿಬೊಮ್ಮನಹಳ್ಳಿ ಪಟ್ಟಣದವರಿಗೆ ಈ ಕರಡಿ ಬಂದಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಈ ಸ್ಥಳದಿಂದ ಚದುರಿ ಹೋಗಿರುವ ಕರಡಿ ಮುಂದೆ ಯಾವುದಾದರೂ ನಗರ, ಪಟ್ಟಣ ಅಥವಾ ಹಳ್ಳಿಗಳ ಪ್ರದೇಶಗಳಿಗೆ ಹೋಗಿ ಜನರಿಗೆ ತೊಂದರೆ ಕೊಡುವ ಸಾಧ್ಯತೆ ಹೆಚ್ಚಿದೆ ಎನ್ನುವ ಆತಂಕ ಇಲ್ಲಿನ ಜನಗಳದ್ದು.

ದಾರಿ ತಪ್ಪಿ ಬಂದಿರುವ ಈ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಬೇಕು ಅಥವಾ ಪಕ್ಕದ ಗುಡೆಕೋಟೆ ಕರಡಿ ದಾಮಕ್ಕೆ ಹೋಗುವಂತೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.