You are currently viewing ಈ ವೃದ್ದ ದಂಪತಿಗಳ ಪಾಲಿಗೆ ಕಣ್ಣಿದ್ದೂ ಕುರುಡಾದರು ಇಲ್ಲಿನ ಪೊಲೀಸ್, ಅಧಿಕಾರಿಗಳು.

ಈ ವೃದ್ದ ದಂಪತಿಗಳ ಪಾಲಿಗೆ ಕಣ್ಣಿದ್ದೂ ಕುರುಡಾದರು ಇಲ್ಲಿನ ಪೊಲೀಸ್, ಅಧಿಕಾರಿಗಳು.

ವಿಜಯನಗರ…ಸಂಭಂದಿಗಳೇ ವೃದ್ದ ದಂಪತಿಗಳಿಗೆ ವಂಚಿಸಿ ಮೂರುವರೆ ಎಕ್ಕರೆ ಜಮೀನು ಕಬಳಿಸಿರುವ ಪ್ರಕರಣ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.ಇನ್ನು ಸಂಭಂದಿಗಳ ಈ ವಂಚನೆಗೆ ಇಲ್ಲಿನ ಸಬ್ ರಿಜಿಸ್ಟರ್ ಕಛೇರಿಯ ಸಿಬ್ಬಂದಿ,ಅಧಿಕಾರಿಗಳು ಸಹಕರಿಸಿರುವುದು ದುರಂತದ ವಿಚಾರ,  ಈ ಪ್ರಕರಣದ ದೂರು ಪಡೆಯದೆ  ವೃದ್ದ ದಂಪತಿಗಳಿಗೆ ಆಗಿರುವ ಅನ್ಯಾಯವನ್ನ ಕಂಡೂ ಕಾಣದಂತೆ ಕಣ್ಣುಮುಚ್ಚಿ ಕುಳಿತಿದೆ ಇಲ್ಲಿನ ಪೊಲೀಸ್ ಇಲಾಖೆ. 

ಹೌದು ಹೂವಿನಹಡಗಲಿ ತಾಲೂಕಿನ ಅಲ್ಲೀಪುರ ಗ್ರಾಮದ ಶಹಬಾದಿ ಶೀವಪ್ಪ ಮತ್ತು ದಾನಮ್ಮ ವಂಚನೆಗೆ ಒಳಗಾಗಿ ನಲುಗುತ್ತಿರುವ ವೃದ್ದ ದಂಪತಿಗಳಾಗಿದ್ದು, ಮನೆ ಖರೀದಿಸಿದ್ದೇವೆ ಸಾಕ್ಷಿಗೆ ನೀವೆ ಸಹಿ ಹಾಕಬೇಕು ಬನ್ನಿ ಎಂದು  ವೃದ್ದ ದಂಪತಿಗಳನ್ನ ಹೂವಿನಹಡಗಲಿ  ಸಬ್ ರಿಜಿಸ್ಟರ್ ಕಛೇರಿಗೆ ಕರೆದೊಯ್ದಿದ್ದ ಹಿರೇಕೊಳಚಿ ಗ್ರಾಮದ ಕೊಟ್ರೇಶ್. ಆರ್. ತಂದೆ ನಾಗಪ್ಪ ಮತ್ತು ಬಸವರಾಜ್ ಗುತ್ತಲ ತಂದೆ ನಾಗಪ್ಪ ಹಾಗೂ ನವೀನ್ ಕುಮಾರ್ ತಂದೆ ಕರಿಯಪ್ಪ.ಎನ್ನುವ ಮೂರು ಜನ ವೃದ್ದ ದಂಪತಿಗಳಿಗೆ ತಿಳಿಯದೆ ಕ್ರಯ ಪತ್ರಕ್ಕೆ ಸಹಿ ಪಡೆದು ಆಸ್ತಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಇನ್ನು ವೃದ್ದ ದಂಪತಿಗಳು ತಮ್ಮ ಆಸ್ತಿಯನ್ನ ಮಾರಾಟಮಾಡಿದ್ದಾರೊ ಅಥವಾ ಇಲ್ಲವೊ ಎಂಬುದನ್ನ ಖಚಿತಪಡಿಸಿಕೊಳ್ಳಬೇಕಿದ್ದ ಇಲ್ಲಿನ ಸಬ್ ರಿಜಿಸ್ಟರ್ ಕಛೇರಿಯ ಅಧಿಕಾರಿಗಳು ಯಾಕೆ ಸುಮ್ಮನೆ ಇದ್ದರು ಎನ್ನುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕ್ರಯ ಪತ್ರದ ಪ್ರಕಾರ ಹಡಗಲಿ ತಾಲೂಕಿನ 63 ತಿಮ್ಮಲಾಪುರ ಗ್ರಾಮದ 255/B4 ಸರ್ವೇ ನಂಬರ್. 38ಸೆಂಟ್ಸ್ ಮತ್ತು ಇದೇ ಸರ್ವೇ ನಂಬರಿನ A4 ವಿಬಾಗದ 65 ಸೆಂಟ್ಸ್ ಜಮೀನನ್ನ ಕೊಟ್ರೇಶ್ ತಂದೆ ನಾಗಪ್ಪನ ಹೆಸರಲ್ಲಿ ವರ್ಗಾವಣೆ ಆಗಿದೆ. ಅದೇರೀತಿ 63ತಿಮ್ಮಲಾಪುರ ಗ್ರಾಮದ 254/C/2A ಸರ್ವೇ ನಂಬರಿನ ಒಂದು ಎಕ್ಕರೆ 24 ಸೆಂಟ್ಸ್ ಜಮೀನು ಬಸವರಾಜ ತಂದೆ ನಾಗಪ್ಪನ ಹೆಸರಲ್ಲಿ ನೋಂದಣಿ ಆಗಿದೆ‌. ಮೂರನೆಯದಾಗಿ 63ತಿಮ್ಮಲಾಪುರ ಗ್ರಾಮದ 255/C4 ಸರ್ವೇ ನಂಬರಿನ 45 ಸೆಂಟ್ಸ್ ಮತ್ತು ಇದೇ ಸರ್ವೇ ನಂಬರಿನ D4 ವಿಬಾಗದಲ್ಲಿ 44ಸೆಂಟ್ಸ್ ಅದೇ ಸರ್ವೇ ನಂಬರಿನ E4 ವಿಬಾಗದಲ್ಲಿ 20ಸೆಂಟ್ಸ್ ಭೂಮಿ ನವೀನ್ ಕುಮಾರ್ ತಂದೆ ಕರಿಯಪ್ಪ ಹೆಸರಲ್ಲಿ ನೋಂದಣಿಯಾಗಿದ್ದು, ಒಟ್ಟು 3 ಎಕ್ಕರೆ 41ಸೆಂಟ್ಸ್ ಭೂಮಿಯನ್ನ ವೃದ್ದ ದಂಪತಿಗಳಿಗೆ ವಂಚಿಸಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ.

ಕೆಲವು ದಿನಗಳ ನಂತರ ತಮ್ಮ ಜಮೀನನ್ನ ಕಬಳಿಸಿದ ವಿಷಯ ತಿಳಿದು ಕಂಗಾಲಾಗಿರುವ ವೃದ್ದ ದಂಪತಿಗಳು. ಹಿರೇಹಡಗಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ವಂಚಿಸಿರುವ ವಂಚಕರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ ದೂರು ಪಡೆದು ವಂಚನೆ ಪ್ರಕರಣ ದಾಖಲಿಸಿಕೊಳ್ಳಬೇಕಿದ್ದ ಹಿರೇಹಡಗಲಿ ಪಿ.ಎಸ್.ಐ. ಇದು ಸಿವಿಲ್ ಮ್ಯಾಟ್ರು ನಮಗೆ ಸಂಭಂದ ಇಲ್ಲ ಕೋರ್ಟಿಗೆ ಹೋಗಿ ನ್ಯಾಯ ಪಡೆಯಿರಿ ಎಂದು ಹಾರಿಕೆ ಉತ್ತರ ನೀಡಿ ಕಳಿಸಿದ್ದಾರೆ. ಇದಾದ ಬಳಿಕ ಅಲ್ಲೀಪುರ ಗ್ರಾಮಸ್ಥರು ವೃದ್ದ ದಂಪತಿಗಳಿಗೆ ಬೆಂಬಲವಾಗಿ ನಿಂತು, ವಂಚಿಸಿದ ಮೂರು ಜನ ಸಂಭಂದಿಗಳನ್ನ ಹಿರೇಹಡಗಲಿ ಹಾಲಸ್ವಾಮಿ ಮಠಕ್ಕೆ ಕರೆಯಿಸಿ ರಾಜಿ ಪಂಚಾಯ್ತಿ ಮಾಡಿದ್ದಾರೆ. ಅದಲ್ಲದೆ ಸುಳ್ಳು ಹೇಳಿ ಮಾಡಿರುವ ಕ್ರಯ ಪತ್ರ ರದ್ದತಿಗೆ ಕೂಡ ಮತ್ತೊಂದು ಕ್ರಯ ಬರೆದು ಸಾಕ್ಷಿಗಳ ಸಮ್ಮುಖದಲ್ಲಿ ಸಹಿ ಪಡೆದು ವೃದ್ದ ದಂಪತಿಗಳಿಗೆ ಜಮೀನು ಹಿಂತಿರುಗಿಸಲು ಹೇಳಿದ್ದಾರೆ.

ಅದರ ಜೊತೆಗೆ ಹೂವಿನಹಡಗಲಿ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಕ್ರಯ ರದ್ದತಿಗೆ ಮತ್ತೊಮ್ಮೆ ರಿಜಿಸ್ಟರ್ ಕೂಡ ಮಾಡಲಾಗಿದೆ. ಆದರೆ ಕ್ರಯ ರಿಜಿಸ್ಟರ್ ರದ್ದತಿ ಆದ ಮೇಲೂ ವೃದ್ದ ದಂಪತಿಗಳ ಹೆಸರಲ್ಲಿ ಆಸ್ತಿ ಉಳಿದಿಲ್ಲ, ಬದಲಾಗಿ ವಂಚಿಸಿ ಆಸ್ತಿ ಕಬಳಿಸಿದ್ದ ಮೂರು ಜನ ವಂಚಕರ ಹೆಸರಲ್ಲಿ ಪಹಣಿ ಬದಲಾವಣೆ ಆಗಿದೆ. ಕ್ರಯ ರದ್ದತಿ ಆದ ಮೇಲೆ ಈ ದಾಖಲೆ ಹೂವಿನಹಡಗಲಿ ತಹಸಿಲ್ದಾರ್ ಕಛೇರಿಗೆ ತಲುಪಬೇಕಿತ್ತು, ಆದರೆ ಈ ದಾಖಲೆಗಳು ಹೂವಿನಹಡಗಲಿ ಸಬ್ ರಿಜಿಸ್ಟರ್ ಕಛೇರಿಗೆ ತಲುಪದ ಹಿನ್ನೆಲೆಯಲ್ಲಿ ವಂಚಕರ ಹೆಸರಲ್ಲೇ ಆಸ್ತಿ ಉಳಿದಿದ್ದು ವೃದ್ದ ಸಂಪತಿಗಳು ಕಂಗಾಲಾಗಿದ್ದಾರೆ.

ಮಕ್ಕಳಿಲ್ಲದ ಈ ವೃದ್ದ ದಂಪತಿಗೆ ಕಛೇರಿಗೆ ಅಲೆಯುವ ಶಕ್ತಿ ಇಲ್ಲವೇ ಇಲ್ಲ. ಕಾರಣ ವೃದ್ದ ಶಹಬಾದಿ ಶೀವಪ್ಪನ ಒಂದು ಕಾಲು ಬೇರೆ ಇಲ್ಲ. ಹೀಗಿರುವಾಗ ಇಲ್ಲಿನ ಅಧಿಕಾರಿಗಳು ನೀವು ಕೋರ್ಟಿಗೆ ಹೋಗಿ ನ್ಯಾಯ ಪಡೆಯಿರಿ ಎಂದು ಹಾರಿಕೆ ಉತ್ತರ ನೀಡುತಿದ್ದಾರೆ. ಈ ಪ್ರಕರಣ ನಡೆದು ಒಂದು ವರ್ಷ ಕಳೆಯುತ್ತಾ ಬಂದರೂ ಇದು ವರೆಗೆ ಈ ವೃದ್ದ ದಂಪತಿಗಳಿಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ವಿಜಯನಗರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯ ಮುಂದೆ ಧರಣಿ ಸತ್ತ್ಯಾಗ್ರಹಮಾಡುವ ಆಲೋಚನೆಯನ್ನ ವೃದ್ದ ದಂಪತಿಗಳು ಮಾಡಿದ್ದಾರೆ. ಅಷ್ಟರಲ್ಲೇ ತಪ್ಪಿತಸ್ಥರ ವಿರುದ್ದ ಕ್ರಮ ಜರಿಗಿಸಿ ವೃದ್ದ ದಂಪತಿಗಳಿಗೆ ನ್ಯಾಯ ಕೊಡಿಸಬೇಕಿದೆ ಇಲ್ಲಿನ ಅಧಿಕಾರಿ ವರ್ಗ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.