![](https://hampimirror.com/media/2022/02/IMG_20220218_180117-655x1024.jpg)
ವಿಜಯನಗರ…ಈ ಬಾರಿ ಕೂಡ ಕೊವಿಡ್ ನಿಯಮಗಳ ಕಟ್ಟಳೆಯಲ್ಲೇ ಶ್ರೀ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಸರಳವಾಗಿ ನಡೆಯಿತು. ತೆಂಕಣ ಮರಡಿಯಲ್ಲಿ ಬಿಲ್ಲನ್ನ ಏರಿದ ಗೊರವಜ್ಜ ”ಮಳೆ ಬೆಳೆ ಸಂಪಾಯಿತಲೇ ಪರಾಕ್” ಎಂದು ವರ್ಷದ ಭವಿಷ್ಯವಾಣಿಯನ್ನ ನುಡಿದಿದ್ದಾರೆ.
ಗೊರವಪ್ಪ ರಾಮಪ್ಪಜ್ಜ ನುಡಿಯುವ ಈ ಭವಿಷ್ಯವಾಣಿಯನ್ನ ಬಹುತೇಕರು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಈ ಬಾರಿಯ ಕಾರ್ಣಿಕೋತ್ಸವದ ಭವಿಷ್ಯ ವಾಣಿ ರೈತರಿಗೆ ಹೆಚ್ಚು ಖುಷಿ ನೀಡಿದೆ ಎನ್ನಲಾಗುತ್ತಿದೆ. ಮುಂದಿನ ಮಳೆ ವರ್ಷ, ಮಳೆ ಸಂಪಾಗಿ ಉತ್ತಮ ಬೆಳೆ ಕೈಸೇರುವ ನಿರೀಕ್ಷೆಯನ್ನ ರೈತರು ಇಟ್ಟುಕೊಂಡಿದ್ದಾರೆ. ಈ ಮೂಲಕ ಮುಂದಿನ ಒಂದು ವರ್ಷ ಹೆಚ್ಚು ಸಂತೋಷದಿಂದ ರೈತ ಸಮುದಾಯ ಇರುತ್ತದೆ ಎಂದು ಇಲ್ಲಿನ ದೇವಸ್ಥಾನದ ಪ್ರದಾನ ಅರ್ಚಕರು ಮತ್ತು ಧರ್ಮ ದರ್ಶಿಗಳು ಆದ ವೆಂಕಪ್ಪಯ್ಯ ಒಡೆಯರ್ ವ್ಯಾಖ್ಯಾನಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ನಡೆಯುವ ಈ ಕಾರ್ಣಿಕೋತ್ಸವಕ್ಕೆ ಕೊರೊನ ಮಹಾಮಾರಿಯ ಕರಿ ನೆರಳು ಆವರಿಸಿದೆ. ಅದರ ಪರಿಣಾಮ ಕಾರ್ಣಿಕೋತ್ಸವವನ್ನ ಸರಳವಾಗಿ ಆಚರಿಸುವ ಮೂಲಕ ಸಂಪ್ರದಾಯ ಮುಂದುವರೆಸಿಕೊಂಡು ಬರುತ್ತಿದೆ ವಿಜಯನಗರ ಜಿಲ್ಲಾಡಳಿತ.
![](https://hampimirror.com/media/2022/02/IMG_20220218_191428.jpg)
![](https://hampimirror.com/media/2022/02/IMG_20220218_180105-598x1024.jpg)
ಇಂದು ಕೂಡ ಕೊರೋನ ನಿಯಮ ಪಾಲನೆ ಮಾಡುವ ಮೂಲಕ ಕಾರ್ಣಿಕೋತ್ಸವವನ್ನ ವಿಜಯನಗರ ಜಿಲ್ಲಾಡಳಿತ ನಡೆಸಿಕೊಟ್ಟಿದೆ. ಕೊರೊನ ನಿಯಂತ್ರಣ ಹಿತದೃಷ್ಠಿಯಿಂದ ಮೈಲಾರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಬ್ಯಾಸರಿಕೇಡ್ ಗಳನ್ನ ಅಳವಡಿಸುವ ಮೂಲಕ ಪರ ಸ್ಥಳಗಳಿಂದ ಬರುವ ಪ್ರಯಾಣಿಕರ ವಾಹನಗಳಿಗೆ ಅವಕಾಶ ನೀಡಿರಲಿಲ್ಲ. ಕೇವಲ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದರೂ ಲಕ್ಷಾಂತರ ಭಕ್ತ ಸಮೂಹ ಕಾರ್ಣಿಕೋತ್ಸವದಲ್ಲಿ ಬಾಗಿಯಾಗಿತ್ತು,
ಇನ್ನು ಶ್ರೀ ಮೈಲಾರೇಶ್ವರನ ದೇವಸ್ಥಾನಕ್ಕೆ ಭಕ್ತರಿಗೆ ಮೊದಲು ಪ್ರವೇಶ ಕಲ್ಪಿಸದೆ ಜಾತ್ರೆ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು, ಆದರೆ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷ ಸಂಜೀವ್ ಮರಡಿ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ಆದ ನಂತರ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶ ನೀಡುವ ಮೂಲಕ ಕೊವಿಡ್ ನಿಯಮ ಪಾಲನೆ ಮಾಡಲು ಜಿಲ್ಲಾಡಳಿತ ಭಕ್ತರಿಗೆ ಸೂಚಿಸಿತು. ಒಟ್ಟಿನಲ್ಲಿ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಎಂದರೆ ರಾಜ್ಯದಲ್ಲೇ ಅತಿ ಹೆಚ್ಚು ಜನ ಸೇರುವ ಧಾರ್ಮಿಕ ಉತ್ಸವ ಇದಾಗಿದ್ದು, ಆಂದ್ರಪ್ರದೇಶ, ತೆಲಂಗಾಣ, ಹಾಗೂ ಮಹಾರಾಷ್ಟ್ರಗಳಿಂದಲೂ ಲಕ್ಷಾಂತರ ಭಕ್ತರು ಮೈಲಾರಕ್ಕೆ ಬರುವುದು ಪ್ರತಿ ವರ್ಷದ ವಾಡಿಕೆ, ಇಂತಾ ಉತ್ಸವಕ್ಕೆ ಕಳೆದ ಎರಡು ವರ್ಷಗಳಿಂದ ಕೊರೊನ ಮಹಾಮಾರಿ ಕಂಟಕವಾಗಿ ಪರಿಣಮಿಸಿದೆ. ಹೀಗಿದ್ದರು ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಮೈಲಾರ ತಲುಪಿ ಕಾರ್ಣಿಕೋತ್ಸವದಲ್ಲಿ ಭಾಗಿಯಾಗಿ ತಮ್ಮ ಭಕ್ತಿ ಪ್ರದರ್ಶನ ಮಾಡುತಿದ್ದಾರೆ.
![](https://hampimirror.com/media/2022/02/IMG_20220218_180032-1024x566.jpg)
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.