ದೇವಸ್ಥಾನದ ಸಿಬ್ಬಂದಿಗಳಿಗೆ ಮಡಿ ಮೈಲಿಗೆ ಬಟ್ಟೆಗಳ ಕಾಟ.

  • Post category:Uncategorized

ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ  ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವ ಭಕ್ತರು, ತಮ್ಮ ಮೈಲಿಗೆ ಬಟ್ಟೆಯನ್ನು ತೊಳೆದು ದೇವಸ್ಥಾನದ ಸುತ್ತಲೂ ಇರುವ ಕಾಂಪೌಂಡ್ ಗೋಡೆಗೆ ಒಣ ಹಾಕುವುದು ಇತ್ತೀಚಿಗೆ ಹೆಚ್ಚಾಗಿ ಕಂಡುಬರುತ್ತಿದೆ.

ಕೆಲವು ಭಕ್ತರು ತಮ್ಮ ಮೈಲಿಗೆ ಬಟ್ಟೆಯನ್ನ ನದಿಯಲ್ಲಿ ಹಾಗೆ ಬಿಟ್ಟು ನದಿಯ ನೀರು ಮಲೀನಕ್ಕೆ ಕಾರಣರಾದರೆ, ಇನ್ನು ಕೆಲವು ಭಕ್ತರು  ಬಟ್ಟೆಗಳನ್ನ ತೊಳೆದು ದೇವಸ್ಥಾನದ ಸುತ್ತಲೂ ಇರುವ ಕಬ್ಬಿಣದ ಕಾಂಪೌಂಡಿಗೆ ನೇತು ಹಾಕಿ ದೇವಸ್ಥಾನದ ಪರಿಸರ ಕಳೆಗುಂದಲು ಕಾರಣರಾಗುತಿದ್ದಾರೆ, ಈ ದೃಶ್ಯ ದೇವಸ್ಥಾನಕ್ಕೆ ಬರುವ ಇನ್ನೂ ಕೆಲವು ಭಕ್ತರಿಗೆ ಮುಜುಗರ ಉಂಟು ಮಾಡುತ್ತಿದೆ.

ಪ್ರತಿ ದಿನ ಬೆಳಗಾದರೆ ಸಾಕು ದೇವಸ್ಥಾನದ ನದಿ ಪಕ್ಕದಲ್ಲಿರುವ ಕಾಂಪೌಂಡಿಗೆ ಬಟ್ಟೆಗಳು ನೇತು ಬಿದ್ದಿರುವ ದೃಶ್ಯ ಕಣ್ಣಿಗೆ ಎದ್ದು ಕಾಣುತ್ತದೆ. ಕೆಲವು ಭಕ್ತರ ಈ ವರ್ತನೆ ಇಲ್ಲಿನ ದೇವಸ್ಥಾನದ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಹಾಗಾಗಿ ಇಲ್ಲಿನ ದೇವಸ್ಥಾನದ ಸಿಬ್ಬಂದಿಗಳಿಗೆ ಪ್ರತಿದಿನ ಬೆಳಗ್ಗೆ  ನೇತು ಬಿದ್ದಿರುವ ಬಟ್ಟೆಗಳನ್ನು ತೆರವುಗೊಳಿಸುವುದೇ ಕಾರ್ಯವಾಗಿ ಪರಿಣಮಿಸಿದೆ. ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತರು ನದಿಯ ಸ್ವಚ್ಛತೆ ಕಾಪಾಡುವುದರ ಜೊತೆಗೆ ಇಲ್ಲಿನ ಪರಿಸರವನ್ನ ಕೂಡ ಸ್ವಚ್ಛವಾಗಿಡಲು ಗಮನಹರಿಸಬೇಕು ಎಂಬುದು ಈ ಭಾಗದ ಜನಸಾಮಾನ್ಯರ ಒತ್ತಾಯವಾಗಿದೆ.



ವರದಿ. ಸುಭಾನಿ ಪಿಂಜಾರ ಹಂಪಿ ಮಿರರ್. ವಿಜಯನಗರ.