You are currently viewing ಗಡುವು ಮೀರಿದರೆ ಹೋರಾಟದ ಸ್ವರೂಪ ಬದಲಾಗುತ್ತೆ ಶಾಸಕ ಭೀಮಾನಾಯ್ಕ್ ಎಚ್ಚರಿಕೆ.

ಗಡುವು ಮೀರಿದರೆ ಹೋರಾಟದ ಸ್ವರೂಪ ಬದಲಾಗುತ್ತೆ ಶಾಸಕ ಭೀಮಾನಾಯ್ಕ್ ಎಚ್ಚರಿಕೆ.

ವಿಜಯನಗರ…ಇನ್ನೂ ಹತ್ತು ದಿನದ ಒಳಗಡೆ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ ಹೋರಾಟದ ಸ್ವರೂಪ ಬದಲಾಗುವುದೆಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಸರ್ಕಾರಕ್ಕೆ ಮತ್ತು ವಿಜಯನಗರ ಜಿಲ್ಲಾಡಳಿತಕ್ಕೆ ಗಡುವು ನೀಡಿದ್ದಾರೆ.ಹೌದು ತುಂಗಭದ್ರ ಜಲಾಶಯದಿಂದ ಪಾವಗಡಕ್ಕೆ ಕುಡಿಯುವ ನೀರು ಹರಿಸುವ ಯೋಜನೆಯಲ್ಲಿ ಮರಿಯಮ್ಮನಹಳ್ಳಿ ಪಟ್ಟಣಕ್ಕೂ ನೀರು ಕೊಡಬೇಕೆಂಬ ಬೇಡಿಕೆಗೆ ಸಂಭಂದಿಸಿದಂತೆ ಇಂದು ವಿಜಯನಗರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಹತ್ವದ ಸಭೆ ನಡೆಸಲಾಯಿತು. ಜಿಲ್ಲಾಧಿಕಾರಿ ಅನಿರುದ್ದ ಪಿ.ಶ್ರವಣ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಬಳ್ಳಾರಿ ಜಿಲ್ಲೆ ಸಂಸದ ವೈ.ದೇವೇಂದ್ರಪ್ಪ, ಹಾಗೂ ಹಗರಿಬೊಮ್ಮನಹಳ್ಳಿಯ ಶಾಸಕ ಭೀಮಾನಾಯ್ಕ್ ಸೇರಿದಂತೆ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿ ಸರ್ವ ಸದಸ್ಯರು ಸಭೆಯಲ್ಲಿ ಬಾಗಿಯಾಗಿದ್ದರು.

ತುಂಗಭದ್ರ ಜಲಾಶಯದ ಹಿನ್ನೀರಿನಲ್ಲಿರುವ ಹಂಪಿನಕಟ್ಟಿ ಕೆರೆಯ ಅಂಗಳದಿಂದ ಪಾವಗಡಕ್ಕೆ ನೀರು ಹರಿಸುವ ಸಂಭಂದ, ಅಂದಾಜು ಎರಡು ಸಾವಿರ ಕೋಟಿಗೂ ಅಧಿಕ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷಗಳು ಕಳೆದಿವೆ. ಶೇಕಡ ಐವತ್ತರಷ್ಟು ಕಾಮಗಾರಿ ಮುಗಿದಿದೆ. ಪ್ರಾರಂಭವಾಗಿರುವ ಈ ಯೋಜನೆಯ ಪೈಪ್ ಲೈನ್ ಕಾಮಗಾರಿ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಹಾದು ಹೋಗಲಿದ್ದು, ಪಾವಗಡ ಕುಡಿಯುವ ನೀರಿನ ಯೋಜನೆಯಲ್ಲಿ ನಮಗೂ ನೀರು ಕೊಡಿ ಎಂದು ಮರಿಯಮ್ಮನಹಳ್ಳಿ ಜನ ಸಾಮಾನ್ಯರು ಒತ್ತಾಯಿಸಿದ್ದಾರೆ. ಈ ಸಂಭಂದ ಕಳೆದ ಮೂರು ದಿನಗಳ ಹಿಂದೆ  ಹಗರಿಬೊಮ್ಮನಹಳ್ಳಿಯ ಶಾಸಕ ಭೀಮಾನಾಯ್ಕ್ ಮತ್ತು ಮರಿಯಮ್ಮನಹಳ್ಳಿ ಪಟ್ಟಣ ಪಟ್ಟಣ ಪಂಚಾಯ್ತಿ ಸದಸ್ಯರ ಜೊತಗೂಡಿ ಕಾಮಗಾರಿ ನಡೆದ ಸ್ಥಳಕ್ಕೆ ಹೋಗಿ ಪ್ರತಿಭಟನೆ ಸಹ ನಡೆಸಿದ್ದರು.

ದೀಪದ ಕೆಳಗೆ ಕತ್ತಲು ಇಟ್ಟುಕೊಂಡು ದೂರ ಇದ್ದವರಿಗೆ ಬೆಳಕು ಚಲ್ಲುವ ಸರ್ಕಾರದ ಈ ಯೋಜನೆ ಯಾಕೆ ಎಂದು ಆಕ್ರೋಶ ಹೊರ ಹಾಕಿದ್ದರು. ತುಂಗಭದ್ರ ಜಲಾಶಯ ಪಕ್ಕದಲ್ಲೇ ಮರಿಯಮ್ಮನಹಳ್ಳಿ ಪಟ್ಟಣ ಇದ್ದು, ಜಲಾಶಯ ನಿರ್ಮಾಣಕ್ಕೆ ಮರಿಯಮ್ಮನಹಳ್ಳಿಯ ಜನಗಳು ಮನೆ, ಮಠ, ಕಳೆದುಕೊಂಡವರು, ಹೀಗಿದ್ದರು ಜಲಾಶಯ ನಿರ್ಮಾಣವಾಗಿ ಸುಮಾರು ಎಪ್ಪತ್ತು ವರ್ಷಗಳು ಕಳೆಯುತ್ತಾ ಬಂದರು ಮರಿಯಮ್ಮನಹಳ್ಳಿ ಪಟ್ಟಣದ ಜನರಿಗೆ ಇದುವರೆಗೆ ಕುಡಿಯುವ ನೀರು ಸಿಕ್ಕಿಲ್ಲ. ಹೀಗಿರುವಾಗ ಮರಿಯಮ್ಮನಹಳ್ಳಿ ಮಾರ್ಗವಾಗಿ ಹಾದು ಹೋಗುವ ಪಾವಗಡ ಕುಡಿಯುವ ನೀರಿನ ಯೋಜನೆಯಲ್ಲಿ ನಮಗೂ ಸ್ವಲ್ಪ ನೀರು ಕೊಡಿ ಎಂದು ಶಾಸಕ ಭೀಮಾನಾಯ್ಕ್ ಮತ್ತು ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯ್ತಿ ಸದಸ್ಯರು ಪಟ್ಟ ಹಿಡಿದಿದ್ದು ಪ್ರತಿಭಟನೆ ಮಾಡಿದ್ದರು.

ಇದೇ ವಿಚಾರವಾಗಿ ಇಂದು ವಿಜಯನಗರ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ ನಡೆಸಲಾಯಿತು. ಶಾಸಕ ಭೀಮಾನಾಯ್ಕ್ ಮತ್ತು ಮರಿಯಮ್ಮನಹಳ್ಳಿ ಪಟ್ಟಣಪಂಚಾಯ್ತಿ ಸದಸ್ಯರ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ, ಪಾವಗಡ ಕುಡಿಯುವ ನೀರಿನ ಯೋಜನೆಯಲ್ಲಿ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ನೀರು ಕೊಡುವುದಕ್ಕೆ ಎಷ್ಟು ಸಾಧ್ಯತೆಗಳಿವೆ ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಯೋಜನೆಯ ರೂಪುರೇಷಗಳನ್ನ ಮತ್ತೊಂದು ಸಾರಿ ಪರಿಸೀಲನೆ ನಡೆಸಿ, ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಪಾವಗಡ ಯೋಜನೆಯಲ್ಲಿ ನೀರು ಕೊಡುವುದರ ಬಗ್ಗೆ ತೀರ್ಮಾನಿಸಲಾಗುತ್ತದೆ, ಯೋಜನೆಯನ್ನ ಹೊರತು ಪಡಿಸಿಯೂ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ನೀರು ಕೊಡುವುದು ಹೇಗೆ ಎಂದು ಸ್ಥಳೀಯ ಅಧಿಕಾರಿಗಳೊಂದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತೆ ಎಂದು ಜಿಲ್ಲಾಧಿಕಾರಿ ಅನಿರುದ್ದ್ ಪಿ.ಶ್ರವಣ್ ಅವರು ತಿಳಿಸಿದ್ದಾರೆ.

ಆದರೆ ಸಭೆಯ ಬಳಿಕೆ ಮಾತನಾಡಿದ ಶಾಸಕ ಭೀಮಾನಾಯ್ಕ್ ಜಿಲ್ಲಾಧಿಕಾರಿಗಳು ನೀಡಿದ ಗಡುವು ಮುಕ್ತಾಯವಾಗುವುದರೊಳಗೆ ನಮ್ಮ ಬೇಡಿಕೆ ಈಡೇರಬೇಕು,ಇಲ್ಲವಾದರೆ ಮಾರನೆ ದಿನವೇ ಮರಿಯಮ್ಮನಹಳ್ಳಿ ಪಟ್ಟಣದ 25 ಸಾವಿರ ಜನಗಳು ನೀರಿಗಾಗಿ ಪ್ರತಿಭಟನೆಗೆ ಇಳಿಯುವುದು ಪಕ್ಕಾ ಎಂದು ಪಟ್ಟು ಹಿಡಿದಿದ್ದಾರೆ. ಪಾವಗಡ ಕುಡಿಯುವ ನೀರಿನ ಯೋಜನೆ ಪ್ರಾರಂಭವಾದಾಗ ಮೊಣಕಾಲ್ಮೂರು ಪಟ್ಟಣಕ್ಕೆ ನೀರು ಕೊಡುವ ಆಲೋಚನೆ ಸರ್ಕಾರಕ್ಕೆ ಇರಲಿಲ್ಲ, ಆದರೆ ಇತ್ತೀಚೆಗೆ ಏಕಾ ಎಕಿಯಾಗಿ ಈ ಯೋಜನೆಯಲ್ಲಿ ಮೊಣಕಾಲ್ಮೂರು ಪಟ್ಟಣಕ್ಕೆ ನೀರು ಕೊಡುವ ತೀರ್ಮಾನವನ್ನ ಸರ್ಕಾರ ಮಾಡಿತು, ಅದೇ ಯೋಜನೆಯಲ್ಲಿ ನಮ್ಮ ಮರಿಯಮ್ಮನಹಳ್ಳಿ ಪಟ್ಟಣಕ್ಕೂ ನೀರು ಕೊಡಿ ಎಂದು ಕೇಳಿದರೆ ಸರ್ಕಾರ ಮೀನಾಮೇಶ ಎಣಿಸುತ್ತಿದೆ ಇದು ಎಷ್ಟು ಸರಿ ಎಂದು ಶಾಸಕ ಭೀಮಾನಾಯ್ಕ್ ಹರಿಹಾಯ್ದಿದ್ದಾರೆ. ಇನ್ನು ಹಗರಿಬೊಮ್ಮನಹಳ್ಳಿಯ ಪುರಸಭೆಯ ಸದಸ್ಯರು ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸುವುದಾಗಿ ಪವಾಡಿ ಹನುಮಂತಪ್ಪ ಮತ್ತು ಮರಿ ರಾಮಪ್ಪ ತಿಳಿಸಿದ್ದಾರೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.