You are currently viewing ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ,<em>ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ಆಚರಣೆ: ಡಿಸಿ ವೆಂಕಟೇಶ್</em>

ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ,ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ಆಚರಣೆ: ಡಿಸಿ ವೆಂಕಟೇಶ್

  • Post category:Uncategorized

ಹೊಸಪೇಟೆ(ವಿಜಯನಗರ) ಕೋವಿಡ್-19 ನಿಯಮ ಸಡಿಲಿಕೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೇರವೇರಿಸುವ ಮೂಲಕ ಅದ್ಧೂರಿಯಾಗಿ ಮೈಲಾರದ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ನೆರವೇರಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು. ಹೂವಿನ ಹಡಗಲಿ ತಾಲೂಕಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗ ಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ಣಿಕೋತ್ಸವ, ಜಾತ್ರಾ ಮಹೋತ್ಸವ ಅಂಗವಾಗಿ ಇಂದು ಪೂರ್ವಭಾವಿ ಸಿದ್ಧತಾ ಸಭೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ  ಮೈಲಾರ ಕ್ಷೇತ್ರದಲ್ಲಿ ಕೈಗೊಳ್ಳಲಾಯಿತು.

ಮೈಲಾರಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ಕೈಗೊಂಡು ನಂತರ ಕಾರ್ಣಿಕೋತ್ಸವ ಜಾತ್ರಾ ನಿರ್ವಹಣೆ ಹಾಗೂ ದೇವಸ್ಥಾನದ ರೂಢಿ ಸಂಪ್ರದಾಯದ ಪೂಜಾ ಕಾರ್ಯ ಮತ್ತು ಧಾರ್ಮಿಕ ಕಾರ್ಯಗಳ ನಿರ್ವಹಣೆಯ ಕುರಿತು ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜ.28ರಿಂದ ಜಾತ್ರಾ ಮಹೋತ್ಸವದ ಮೊದಲ ದಿನದ ಧಾರ್ಮಿಕ ವಿವಿಧ ಕಾರ್ಯಗಳು ಆರಂಭಗೊಳ್ಳಲಿವೆ. ಫೆ.5ರಂದು ಹುಣ್ಣಿಮೆ, ಫೆ.7ರಂದು ಸಂಜೆ 5ಕ್ಕೆ ಕಾರ್ಣಿಕೋತ್ಸವ ಹಾಗೂ ಫೆ.8ಕ್ಕೆ ಸರಪಳಿ ಪವಾಡ ಕಾರ್ಯಕ್ರಮ ನಡೆಯಲಿದೆ.

ಜಾತ್ರಾ ಮಹೋತ್ಸವದಲ್ಲಿ ನೆರೆಜಿಲ್ಲೆಗಳು ಸೇರಿದಂತೆ ಕರ್ನಾಟಕ ಮಹಾರಾಷ್ಟ್ರ ರಾಜ್ಯದ ವಿವಿಧ ಭಾಗಗಳಿಂದ  8-9 ಲಕ್ಷ ಜನ ಭಕ್ತಾದಿಗಳು ಸೇರುವ ನಿರೀಕ್ಷೆಯಿದ್ದು, ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ವಿವಿಧ ಇಲಾಖೆಗಳಿಂದ ಕಲ್ಪಿಸಿಕೊಡುವ ಮೂಲಕ ಸೂಕ್ತ ನಿರ್ವಹಣೆ ಮತ್ತು ಯಾರಿಗೂ ತೊಂದರೆಯಾಗದಂತೆ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲು ಸೂಚಿಸಲಾಯಿತು.
ಕಾರ್ಣಿಕೋತ್ಸವ ನಡೆಯುವ ಸ್ಥಳ ಡೆಂಕನ ಮರಡಿಯಲ್ಲಿ ಕಾರ್ಣಿಕೋತ್ಸವದ ಮುಂಚಿತವಾಗಿ ಬ್ಯಾರಿಕೇಡ್ ಅಳವಡಿಕೆ ಹಾಗೂ ಗಣ್ಯರು ಮತ್ತು ಅತಿಮುಖ್ಯ ವ್ಯಕ್ತಿಗಳ ವಾಹನಗಳು ತೆರಳಲು ಹೊಳಲು ಗ್ರಾಮದಿಂದ  ಡೆಂಕನ ಮರಡಿಗೆ ತೆರಳುವ ಮಾರ್ಗವನ್ನು ಸೂಕ್ತರೀತಿಯಲ್ಲಿ ದುರಸ್ತಿಗೊಳಿಸಲು ಹಾಗೂ ನಿರ್ವಹಣೆ ಕೈಗೊಳ್ಳಲು ಹರಪನಹಳ್ಳಿ ಉಪವಿಭಾಗದ ಡಿವೈಎಸ್ಪಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಹಾಗೂ ಪಿಅರ್‍ಇಡಿ ಕಾರ್ಯನಿರ್ವಾಹಕ ಎಂಜಿನಿಯರ್‍ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಕೈಗೊಳ್ಳಲಾಗುವ ಸೂಕ್ತ ಬಂದೋಬಸ್ತ್ ವ್ಯವಸ್ಥೆಗೆ ನಿಯೋಜಿಸಲಾಗುವ ಪೊಲೀಸ್ ಸಿಬ್ಬಂದಿಗೆ ಅಗತ್ಯ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
600 ತಾತ್ಕಾಲಿಕ ಶೌಚಾಲಯ ನಿರ್ಮಾಣ: ಜಾತ್ರಾ ಮಹೋತ್ಸವದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಆರೋಗ್ಯ ಸೇವೆ, ಸ್ವಚ್ಛತೆ ಹಾಗೂ ನೈರ್ಮಲೀಕರಣ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದ್ದು, ಜಾತ್ರಾ ಸ್ಥಳದ ಮೈದಾನ ಸೇರಿದಂತೆ ವಿವಿಧೆಡೆ 600 ತಾತ್ಕಾಲಿಕ ಶೌಚಾಲಯ ನಿರ್ಮಿಸಿ ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆಗೆ ಸಹಾಯಕರನ್ನು ನೇಮಿಸಿ, ಚರಂಡಿ ನಿರ್ವಹಣೆ ಹಾಗೂ ಡೆಂಕನ ಮರಡಿ ಮತ್ತು ವಿವಿಧೆಡೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸೂಚಿಸಿದರು.

2 ತಾತ್ಕಾಲಿಕ ಆಸ್ಪತ್ರೆ: ಅಗತ್ಯ ವೈದ್ಯ ಸಿಬ್ಬಂದಿ ಒಳಗೊಂಡು ತುರ್ತು ಚಿಕಿತ್ಸೆಗಾಗಿ 2 ತಾತ್ಕಾಲಿಕ ಆಸ್ಪತ್ರೆ ಹಾಗೂ 3 ಆಂಬುಲೆನ್ಸ್ ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಾರಿಗೆ ಸಂಸ್ಥೆಯಿಂದ ವಿಶೇಷ ವಾಹನ: ಫೆ.04ರಿಂದ 9ರವರೆಗೆ ಜಾತ್ರೆಯ ನಿಮಿತ್ತ ಭಕ್ತಾದಿಗಳಿಗೆ ವಿವಿಧ ಭಾಗಗಳಿಂದ ಆಗಮಿಸಲು ಮತ್ತು ತೆರಳಲು ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಣಿಕೋತ್ಸವ ಜರುಗುವ ಡೆಂಕನ ಮರಡಿಯಲ್ಲಿ ಕಾರ್ಣಿಕ ನುಡಿ ಭಕ್ತಾದಿಗಳಿಗೆ ತಲುಪಲು ಸೂಕ್ತ ಧ್ವನಿವರ್ಧಕ ಅಳವಡಿಸಲು ಸೂಚಿಸಿದರು. ಕಾರ್ಣಿಕ ನುಡಿಯ ಎಲ್ಲಾ ದೃಶ್ಯಗಳನ್ನು ಸೆರೆ ಹಿಡಿಯಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಹರಿಹರ ಫಾಲಿಫೈಬರ್ಸ್‍ನಿಂದ ದೇಣಿಗೆ: ಸ್ವಚ್ಛತೆ ಹಾಗೂ ನಿರ್ವಹಣೆಗಾಗಿ ಗ್ರಾಮ ಪಂಚಾಯತಿಗೆ ಬೇಕಾದ ಅಗತ್ಯ ಸಾಮಾಗ್ರಿಗಳ ವೆಚ್ಚಕ್ಕಾಗಿ ಕಳೆದ ವರ್ಷಕ್ಕಿಂತ ಹೆಚ್ಚಿನ ದೇಣಿಗೆ ನೀಡಲು ಹರಿಹರ ಫಾಲಿಫೈಬರ್ಸ್ ಮುಖ್ಯಸ್ಥರೊಂದಿಗೆ ಚರ್ಚಿಸುವುದಾಗಿ ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ತಿಳಿಸಿದರು.
ಜಾತ್ರಾ ಮಹೋತ್ಸವ ಹಾಗೂ ಕಾಣಿಕೋತ್ಸವದಲ್ಲಿ ಕಾರ್ಯನಿರ್ವಹಿಸಲು ಅಗ್ನಿಶಾಮಕ ದಳ, ಪ್ರಚಾರ ಕಾರ್ಯ ಕೈಗೊಳ್ಳಲು ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಸೂಚಿಸಲಾಯಿತು.
ಅಗತ್ಯ ಹೆಚ್ಚುವರಿ ವಿದ್ಯುತ್ ಸೌಲಭ್ಯ ಹಾಗೂ ಧಾರ್ಮಿಕ ಆಚರಣೆಯ ರೂಢಿ ಸಂಪ್ರದಾಯ ಪೂಜಾ ಕಾರ್ಯಗಳನ್ನು ಯಾವುದೇ ಲೋಪವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.

ವಿವಿಧ ಸುಂಕ ವಸೂಲಿಯನ್ನು ನಿಯಮಾನುಸಾರ ಕೈಗೊಳ್ಳಲು, ಪೂಜಾ ಸಾಮಾಗ್ರಿಗಳ ಮಾರಾಟ ಅಂಗಡಿಗಳು ನಿಗದಿತ ಸ್ಥಳದಲ್ಲಿಯೇ ಹಾಕಲು, ಇತರೆ ಅಂಗಡಿ ಹಾಗೂ ನಾಟಕ ಕಂಪನಿಗಳಿಗೆ ವಿಧಿಸುವ ಸುಂಕದ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಕೋವಿಡ್19 ನಂತರದಲ್ಲಿ ಮೊದಲ ಬಾರಿಗೆ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಅದ್ಧೂರಿಯಾಗಿ ಅಚ್ಚುಕಟ್ಟಾಗಿ ಜಾತ್ರಾ ಮಹೋತ್ಸವ ನೆರವೇರಲು ಅಧಿಕಾರಿಗಳು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್, ಹರಪನಹಳ್ಳಿ ಉಪವಿಭಾಗಾಧಿಕಾರಿ ಪ್ರಕಾಶ್ ಟಿ.ವಿ., ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಪ್ರಕಾಶ್ ರಾವ್, ಮೈಲಾರಲಿಂಗ ದೇವಸ್ಥಾನದ ಧರ್ಮಕರ್ತ ಗುರುವೆಂಕಪ್ಪಯ್ಯ ಒಡೆಯರ್, ಮಾಜಿ ಸಚಿವ ಹಾಲಿ ಹೂವಿನಹಡಗಲಿ ಶಾಸಕ ಪಿ ಟಿ ಪರಮೇಶ್ವರ ನಾಯಕ್, ದೇವಸ್ಥಾನದ ಕಾರ್ಯನಿವಾಹಕ ಅಧಿಕಾರಿ ಕೃಷ್ಣಪ್ಪ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.