You are currently viewing ಹಂಪಿಯ ರಥ ಬೀದಿ, ಇದೀಗ ಹಾಳುಬಿದ್ದ ಕೊಳಕು ಬೀದಿ.

ಹಂಪಿಯ ರಥ ಬೀದಿ, ಇದೀಗ ಹಾಳುಬಿದ್ದ ಕೊಳಕು ಬೀದಿ.

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ವಿರೂಪಾಕ್ಷೇಶ್ಚರ ದೇವಸ್ಥಾನದ ರಥ ಬೀದಿ ಇದೀಗ ಕೊಳಚೆ ಪ್ರದೇಶದಂತೆ ಗೋಚರಿಸುತ್ತಿದೆ. ಕಾರಣ ನಿರ್ವಹಣೆ ಇಲ್ಲದೆ ಇರುವುದು, ಹೌದು ಹೀಗೆ ಹಾಳು ಹಾಳು ಹೊಡೆಯುತ್ತಿರುವ ಈ ಮಂಟಪಗಳ ಸಾಲು ಒಂದಾನೊಂದು ಕಾಲದಲ್ಲಿ ಮುತ್ತು, ರತ್ನ, ವಜ್ರ, ವೈಡೂರ್ಯಗಳಿಂದ ತುಂಬಿ ತುಳುಕುತಿತ್ತು. ಪ್ರಪಂಚದ ಬೇರೆ ಬೇರೆ ದೇಶದ ವ್ಯಾಪಾರಿಗಳು ಇಲ್ಲಿಗೆ ಬಂದು ವ್ಯಾಪಾರ ವಹಿವಾಟು ನಡೆಸುತಿದ್ದದ್ದು ಇತಿಹಾಸ.

ಇಂತಾ ಶ್ರೀಮಂತ ಇತಿಹಾಸ ಹೊಂದಿದ್ದ ಈ ಪ್ರದೇಶ ಇದೀಗ ಕೊಳೆತು‌ ನಾರುವ ಸ್ಥಿತಿಯತ್ತ ಬಂದು ತಲುಪಿದೆ, ಇದಕ್ಕೆ ಕಾರಣ ಇಲ್ಲಿನ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ. 

ಹೌದು ಕಳೆದ 2009ನೇ ಇಸವಿಯಲ್ಲಿ ಹಂಪಿಯ ಈ ರಥ ಬೀದಿಯಲ್ಲಿ ವಾಸವಾಗಿದ್ದ ನೂರಾರು ಜನಗಳನ್ನ ವಕ್ಕಲೆಬ್ಬಿಸಲಾಯಿತು, ಕಾರಣ ಈ ಸಾಲು ಮಂಟಪಗಳನ್ನ ಪುನಶ್ಚೇತನ ಗೊಳಿಸುವ ಉದ್ದೇಶದಿಂದ. 

ಇಲ್ಲಿರುವ ನೂರಾರು ಸ್ಥಳೀಯ ಕುಟುಂಭಗಳನ್ನ ಈ ಮಂಟಪಗಳಿಂದ ಹೊರ ಹಾಕಿದ ಆ ಘಳಿಗೆ ಏನಿತ್ತಲ್ಲ, ಎಂತವರೂ ಮರುಗುವಂತಿತ್ತು. ಪ್ರವಾಸಿಗರು ಮತ್ತು ವಿರೂಪಾಕ್ಷೇಶ್ವರನ ಭಕ್ತರಿಂದ ಬರುವ ಆದಾಯವನ್ನೇ ನಂಬಿ ಬದುಕುತಿದ್ದ ಇಲ್ಲಿದ್ದ ಸ್ಥಳೀಯರು, ಸಾಕಷ್ಟು ಗೋಗರೆದು ಕಾಲಾವಕಾಶ ಕೊಡುವಂತೆ ಬೇಡಿಕೊಂಡರು, ಆದರೆ ಅಂದಿನ ಅಧಿಕಾರಿಗಳು ಕೊಂಚವೂ ಕನಿಕರ ತೋರೆದೆ ಒಂದೆರಡು ದಿನದಲ್ಲೇ ಈ ಮಂಟಪದಲ್ಲಿ ವಾಸವಾಗಿದ್ದ ಜನಗಳನ್ನ ತೆರವುಗೊಳಿಸಿ ಸಾಲು ಮಂಟಪಗಳನ್ನ ಅಭಿವೃದ್ಧಿ ಪಡಿಸುವುದಾಗಿ ಹೇಳಿದರು.

ಹೀಗೆ ಅಧಿಕಾರಿಗಳು ಹೇಳಿದ ಮಾತು ಇಂದಿಗೂ ಇಲ್ಲಿನ ಜನ ಸಾಮಾನ್ಯರ ಕಿಯಿಯಲ್ಲಿ ಗುಯ್ಯಿಗುಡುತ್ತಿವೆ.ಕಾರಣ ಘಟನೆ ನಡೆದು ಹದಿಮೂರ ವರುಷಗಳು ಕಳೆದಿವೆ,  ಹೀಗಿದ್ದರು ಅಂದಿಗೆ ತೆರವಾಗಿದ್ದ ಮಂಟಪಗಳ ಪರಿಸ್ಥಿತಿ ಇಂದಿಗೂ ಹಾಗೆ ಇದೆ. ಯಾವುದೇ ಬದಲಾವಣೆ ಇಲ್ಲ, ಮಂಟಪಗಳು ಅಭಿವೃದ್ಧಿಯೂ ಆಗಲಿಲ್ಲ. ವಿರೂಪಾಕ್ಷೇಶ್ವರ ದೇವಸ್ಥಾನದ ಮುಂದಿನ ಎಡಬಾಗದ ಎರಡು ಮಂಟಪಗಳು ನವೀಕರಣ ಗೊಂಡವೆ ಹೊರತು, ಇನ್ನುಳಿದ ಏಳು ನೂರು‌ ಮೀಟರ್ ಗೂ ಅಧಿಕ ಉದ್ದದ ಸಾಲು ಮಂಟಪಗಳು ಇಂದಿಗೂ ಹಾಗೆ ಹಾಳು ಬಿದ್ದಿವೆ. 

ಇಲ್ಲಿನ ಸ್ಮಾರಕಗಳನ್ನ ಜೀರ್ಣೋದ್ಧಾರ ಮಾಡುವುದೇ ಭಾರತೀಯ ಪುರಾತತ್ವ ಇಲಾಖೆಯ ಆದ್ಯ ಕರ್ತವ್ಯ ಆಗಿದೆ, ಹೀಗಿದ್ದರು ಕಣ್ಣಿದ್ದು ಕುರುಡರಂತೆ ಇಲ್ಲಿನ ಅಧಿಕಾರಿಗಳು‌ ನಡೆದುಕೊಳ್ಳುತಿದ್ದಾರೆ. ಇಂತಾ ನಿರ್ಲಕ್ಷದ ಅಧಿಕಾರಿಗಳಿಗೆ ಚಾಟು ಬೀಸುವ ಶಕ್ತಿ ಇಲ್ಲಿನ ಸಂಸದರಿಗೆ ಇಲ್ಲ, ಹಂಪಿಯ ವಾಸ್ತವ ಪರಿಸ್ಥಿತಿಯನ್ನ ಕೇಂದ್ರ ಸರ್ಕಾರದ ಗಮನಕ್ಕೆ ತಂದು ತ್ವರಿತವಾಗಿ ಅಭಿವೃದ್ದಿಪಡಿಸುವ ಮೂಲಕ ಹಂಪಿ ವಾಸ್ತವ ಚಿತ್ರಣವನ್ನೇ ಬದಲಿಸಬಹುದಿತ್ತು. 

ಆದರೆ ಆ ಇಚ್ಚಾಶಕ್ತಿ ಇಲ್ಲಿನ‌ ಸಂಸದರಿಗೆ ಇಲ್ಲದೆ ಇರುವುದು ಎದ್ದು ಕಾಣುತ್ತಿದೆ. ಪ್ರಪಂಚದ ಮೂಲೆ ಮೂಲೆಯಿಂದ ಪ್ರವಾಸಿಗರು ಈ ಸ್ಥಳಕ್ಕೆ ಹರಿದು ಬರುತಿದ್ದಾರೆ, ಕಾರಣ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಇತಿಹಾಸ ಇರುವ ದೇಶ ಭಾರತ, ಅದರಲ್ಲೂ ವಿಜಯನಗರ ಸಾಮ್ರಾಜ್ಯದ ಇತಿಹಾಸಕ್ಕೆ ಸರಿಸಾಟಿಯಾದ ಸಾಮ್ರಾಜ್ಯ ಮತ್ತೊಂದಿಲ್ಲ.

 ಇಷ್ಟೊಂದು ದೊಡ್ಡ ಇತಿಹಾಸ ಇರುವ ಈ ಸ್ಥಳವನ್ನ ಅಭಿವೃದ್ಧಿ ಪಡಿಸಬೇಕಾಗಿರುವುದು ಇಲ್ಲಿನ ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ‌. ಆದರೆ ಸರ್ಕಾರ ಹೇಳುವ ಅಭಿವೃದ್ಧಿ ಕಾರ್ಯ ದಾಖಲೆಗಳಲ್ಲಿ ಕಂಡುಬರುತ್ತದೆ ಹೊರತು ಜನ ಸಾಮಾನ್ಯರ ಕಣ್ಣಿಗೆ ಕಾಣುತ್ತಿಲ್ಲ, ಅದರ ಪರಿಣಾಮ ಹಂಪಿಗೆ ಬೇಟಿಕೊಡುವ ಪ್ರವಾಸಿಗರು ಮೂಗುಮುಚ್ಚಿಕೊಂಡು ಹಂಪಿಯ ಪ್ರವಾಸ ಮುಗಿಸುವ ಪರಿಸ್ಥಿತಿ ಎದುರಾಗಿದೆ. ಈಗಲಾದರು ಇಲ್ಲಿನ ಅಧಿಕಾರಿಗಳು ಈ ಸಾಲು ಮಂಟಪಗಳನ್ನ ಅಭಿವೃದ್ಧಿ ಪಡಿಸುವ ಮೂಲಕ ಹಂಪಿಯ ಕಳೆ ಹೆಚ್ಚಿಸಬೇಕಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.